ಪ್ರಾಣಲಿಂಗಿಯ ಭಕ್ತಸ್ಥಲ - ನಡೆ-ನುಡಿ
ರಚ್ಚೆಯ ನೆರವಿಗೆ ನಾಣುನುಡಿಯಿಲ್ಲದಿಹುದೆ?
ಅದರಂತೆ ಎನಬಹುದೆ ಸಜ್ಜನ ಸ್ತ್ರೀಯ?
ಅದರಂತೆ ಎನಬಹುದೆ ಭಕ್ತಿಯ ರತಿಯ?
ಕರುಳ ಕಲೆ ಪ್ರಕಟಿತವುಂಟೆ, ಕೂಡಲಸಂಗಮದೇವಾ?
Transliteration Racceya neravige nāṇunuḍi illadihude?
Adarante ēnabahude sajjana strīya?
Adarante enabahude bhaktiya ratiya?
Karuḷa kale prakaṭitavuṇṭe, kūḍalasaṅgamadēvā?
Manuscript
English Translation 2 Can there be a country couplement
Without some vulgar words?
Could you say that a gentle wife
Is just like that?
Could you say that a pious love
Is just like that?
Could one's heart's love
O Kūḍala Saṅgama Lord,
Be uttered to the world?
Translated by: L M A Menezes, S M Angadi
Hindi Translation कलंक खुलने पर लोक निंदा नहीं होती?
वैसे कुलीन स्त्री की होती है,
वैसे भक्ति रती को कह सकते हैं?
कहीं अंतरंग रहस्य खुल सकता है
कूडलसंगमदेव?
Translated by: Banakara K Gowdappa
Telugu Translation కూటమి రట్టైన సిగ్గునుడి లేదుపో!
అట్లని తలప వచ్చునే సజ్జన స్త్రీని; అట్లనవచ్చునే
భక్తిరతిని? ప్రకటితమగునే కడుపుతీపి సంగమ దేవా?
Translated by: Dr. Badala Ramaiah
Tamil Translation இரகசியம் வெளிப்படின் வெட்கம்
இல்லாமல் இருக்குமோ? குலப்பெண்ணால்
அதனை விவரிக்கவியலுமோ? பக்தியின்
உயர்ந்த அனுபவத்தை விவரிக்கவியலுமோ?
கூடல சங்கமதேவனே?
Translated by: Smt. Kalyani Venkataraman, Chennai
Marathi Translation
कुलटा स्त्रीला लोकनिंदा येणार नाही का?
सज्जन स्त्रीला लोकनिंदा येऊ शकेल का?
भक्ती रती अशी असते का?
भक्तीमध्ये देखावा, भडकपणा असेल का कूडलसंगमदेवा ?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಆಧ್ಯಾತ್ಮಿಕವಷ್ಟೇ ಅಲ್ಲ –ಆಂತರ್ಯವಾದ ಆತ್ಮೀಯ ಅನುಭವಗಳೂ ತೀರ ಅಗ್ಗವಾದ ರೀತಿಯಲ್ಲಿ ಪ್ರಕಟಗೊಳ್ಳುವುದಿಲ್ಲ. ಏಕೆಂದರೆ ಆ ಅನುಭವಗಳು ಸಂಯಮದಿಂದಲೇ ಸಂವೇದಿಸಿದವಾಗಿರುವವು. ಉದಾಹರಣೆಗೆ –ಒಬ್ಬ ಗರತಿ ಕಾಮಿನಿಯೇ ಆದರೂ –ತಾನು ಪಡೆದ ಕಾಮಸುಖದ ಅನುಭವ ವಿವರಗಳನ್ನು ಅವು ಮೀಸಲು ವಿಚಾರಗಳೆಂದು –ಯಾರೊಂದಿಗೂ ಪ್ರಕಟಿಸುವುದಿಲ್ಲ. ನೆಚ್ಚಿನ ಸಖಿಯೊಬ್ಬಳೊಡನೆ ಪ್ರಕಟಿಸಿದರೂ –ಅದು ವಿರಳಪದ ಲಜ್ಜಾ ವ್ಯಂಜಿತವಷ್ಟೇ ಆಗಿರುವುದು –ಕಾಮುಕರ ಮಾತುಗಳಂತೆ ಅವೆಂದಿಗೂ ಬತ್ತಲಾಗಿರುವುದಿಲ್ಲ.
“ಕಾಣುತ್ತ ಕಾಣುತ್ತ ಕಂಗಳ ಮುಚ್ಚಿದೆ ನೋಡವ್ವ, ಕೇಳುತ್ತ ಕೇಳುತ್ತ ಮೈಮರೆದೊರಗಿದೆ ನೋಡವ್ವ, ಹಾಸಿದ ಹಾಸಿಗೆಯ ಹಂಗಿಲ್ಲದೆ ಹೋಯಿತ್ತು ಕೇಳವ್ವ. ಚೆನ್ನಮಲ್ಲಿಕಾರ್ಜುನದೇವರ ದೇವನು ಕೊಡುವ ಕೂಟವ ನಾನೇನೆಂದರಿಯದೆ ಮರೆದೆ ಕಾಣವ್ವ” (ನನ್ನ ಅಕ್ಕನ ವಚನಗಳು 84).
ಚೆನ್ನನ ಮುದ್ದುನೋಟವನ್ನು ನೋಡುತ್ತಿದ್ದಂತೆಯೇ ಕಣ್ಣುಗಳನ್ನು ಮುಚ್ಚಿದೆ. ಅವನ ಮೃದು ಮಾತುಗಳನ್ನು ಕೇಳುತ್ತಿದ್ದಂತೆಯೇ ಮೈಮರೆತೆ. ಹಾಸಿದ ಹಾಸಿಗೆಯಲ್ಲೋ ನಾವೆಲ್ಲೋ ಆದೆವು. ಕೂಡಿದ ಕೂಟದ ವಿವರವೊಂದೂ ನನಗೀಗ ನೆನಪಿಲ್ಲ” ಎಂಬ ಅಕ್ಕನ ಮಾತಿನಲ್ಲಿ ನಾಚಿಕೆ ಪರವಶ ಉನ್ಮಾದ ತನ್ಮಯತೆಗಳು ನಿರ್ಭರವಾಗಿದ್ದರೂ ನಿರ್ವಿಕಾರವಾಗಿಯೇ ಅಭಿವ್ಯಕ್ತವಾಗಿವೆ. ಅಕ್ಕನ ಈ ಅನುಭವ ಮೇಲ್ನೋಟಕ್ಕೆ ಅಂಗ ಸಂಗವನ್ನು ಕುರಿತಂತೆ ಕಂಡರೂ –ಅಲ್ಲಿ ಅದಕ್ಕೂ ನೂರ್ಮಡಿ ಮಿಗಿಲೆನ್ನುವ ಅಂತರನುಸಂಧಾನದ ಮೂಲಾಧಾರದ ಪದ್ಮಾಸನದ ಅನಾಹತನಾದದ ನೆಟ್ಟದೃಷ್ಟಿಯ ಬೆಳ್ಳಂಬೆಳುಕಿನಲ್ಲಿ ನಿರ್ವಯಲ ಸಮಾಧಿ ಗಂಭೀರವಾಗಿಯೇ ವ್ಯಂಜಿಸುತ್ತದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು