ಬಸವಣ್ಣ   
  ವಚನ - 638     
 
ಆನೆಯನೇರಿಕೊಂಡು ಹೋದಿರೆ ನೀವು, ಕುದುರೆಯನೇರಿಕೊಂಡು ಹೋದಿರೆ ನೀವು, ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೆ ಅಣ್ಣಾ ! ಸತ್ಯದ ನಿಲವನರಿಯದೆ ಹೋದಿರಲ್ಲಾ! ಸದ್ಗುಣವೆಂಬ ಫಲವ ಬಿತ್ತಿ ಬೆಳೆಯದೆ ಹೋದಿರಲ್ಲಾ! ಅಹಂಕಾರವೆಂಬ ಸದಮದಗಜವೇರಿ ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ ! ನಮ್ಮ ಕೂಡಲಸಂಗಮದೇವರನರಿಯದೆ ನರಕಕ್ಕೆ ಭಾಜನವಾದಿರಲ್ಲಾ !