ಬಸವಣ್ಣ   
  ವಚನ - 1009     
 
ಅರಸುವ ಬಳ್ಳಿ ಕಾಲ ತೊಡರಿದಂತಾಯಿತ್ತು, ಬಯಸುವ ಬಯಕೆ ಕೈಸಾರಿದಂತಾಯಿತ್ತು, ಹಲವು ದಿವಸಕೆ ನಂಟರ ಕಂಡಂತಾಯಿತ್ತು. ಅಂದೊಮ್ಮೆ ಅನಿಮಿಷಂಗೆ ಕೋಳುಹೋದ ಲಿಂಗವೆಂದು ಉಮ್ಮಹದಿಂದ ಮಂಗಳಾರತಿಯ ಬೆಳಗಿ, ನವರತ್ನದ ಹಾರ ತೋರಣವ ಕಟ್ಟಿ, ಸಂತೋಷದಿಂದೆನ್ನ ಮನವು ತೊಟ್ಟನೆ ತೊಳಲಿ, ತಿಟ್ಟನೆ ತಿರು(ಗಿ), ದೃಷ್ಟವ ಕಂಡೆನಯ್ಯಾ. ಬಿಟ್ಟು ಹಿಂಗಿದವೆನ್ನ ಭವಮಾಲೆಗಳು, ಗೋಹೇಶ್ವರನ ಶರಣ ಪ್ರಭುದೇವರ ಕರಸ್ಥಲದೊಳಗೆ, ಕೂಡಲಸಂಗಮದೇವರೆಂಬ ಲಿಂಗವ ಕಂಡೆನಾಗಿ.