ಬಸವಣ್ಣ   
  ವಚನ - 1086     
 
ಎನ್ನ ಗಂಡ ಬರಬೇಕೆಂದು, ಎನ್ನಂತರಂಗವೆಂಬ ಮನೆಯ ತೆರಹು ಮಾಡಿ, ಅಷ್ಟದಳವೆಂಬ ಓವರಿಯೊಳಗೆ ನಿಜನಿವಾಸವೆಂಬ ಹಾಸುಗೆಯ ಹಾಸಿ, ಧ್ಯಾನವೆಂಬ ಮೇಲುಕಟ್ಟಂ ಕಟ್ಟಿ, ಜ್ಞಾನವೆಂಬ ದೀಪವ ಬೆಳಗಿ, ನಿಷ್ಕ್ರೀಯೆಂಬ ಉಪಕರಣಂಗಳ ಹರಹಿಕೊಂಡು, ಪಶ್ಚಿಮದ್ವಾರವೆಂಬ ಬಾಗಿಲ ತೆರೆದು, ಕಂಗಳೆ ಪ್ರಾಣವಾಗಿ ಬರವ ಹಾರುತ್ತಿರ್ದೆನಯ್ಯಾ. ನಾನು, ಬಾರದಿರ್ದಡೆ ಉಮ್ಮಳಿಸಿಹೆನೆಂದು ತಾನೆ ಬಂದು ಎನ್ನ ಹೃದಯಸಿಂಹಾಸನದ ಮೇಲೆ ಮೂರ್ತಗೊಂಡಡೆ, ಎನ್ನ ಬಯಕೆ ಸಯವಾಯಿತ್ತು. ಹಿಂದೆ ಹನ್ನೆರಡು ವರುಷದಲ್ಲಿದ್ದ ಚಿಂತೆಯಿಂದು ನಿಶ್ಚಿಂತೆಯಾಯಿತ್ತು. ಕೂಡಲಸಂಗಮದೇವರು ಕೃಪಾಮೂರ್ತಿಯಾದ ಕಾರಣ ನಾನು ಬದುಕಿದೆನು.