ಬಸವಣ್ಣ   
  ವಚನ - 1123     
 
ಕಂಗಳೊಳಗೆ ಕರುಳಿಲ್ಲ, ಕಾಯದೊಳಗೆ ಮಾಯವಿಲ್ಲ, ಮನದೊಳಗೆ ಅಹಂಕಾರವಿಲ್ಲ. ದೇಹವೆಂದರಿಯೆ, ನಿರ್ದೇಹವೆಂದರಿಯೆ, ಜಂತ್ರದ ಸೂತ್ರದಂತೆ ಇಪ್ಪ ನಿಬ್ಬೆರಗಿನ ಮೂರ್ತಿಯ ನೋಡಾ ! ಲಿಂಗಜಂಗಮದ ಒಕ್ಕುಮಿಕ್ಕ ಪ್ರಸಾದವ ಕೊಂಡು, ಮಿಕ್ಕ ಮೀರಿ ನಿಂದ ಮಹಾಪ್ರಸಾದಿಯ ನೋಡಾ ! ತನ್ನನರಿದಹರೆಂದು ಜಗದ ಕಣ್ಣಿಂಗೆ ಮಾಯದ ಮಂಜು ಕವಿಸಿ, ನಿಜಪದದಲ್ಲಿ ತದುಗತನಾದನು. ಕೂಡಲಸಂಗಮದೇವರಲ್ಲಿ ಮರುಳುಶಂಕರದೇವರ ನಿಲವ ನೋಡಾ, ಚೆನ್ನಬಸವಣ್ಣಾ.