ಬಸವಣ್ಣ   
  ವಚನ - 1257     
 
ನೀರ ಒರಳ ಮಾಡಿ, ನೆರಳ ಒನಕೆಯ ಮಾಡಿ, ಆಕಾರವಿಲ್ಲದಕ್ಕಿಯ ಥಳಿಸುತ್ತಿರಲು, ಮೇರುಗಿರಿಯಾಕಳ ಕರೆದ ಕ್ಷೀರದಲ್ಲಿ ಅಡಿಗೆಯ ಮಾಡಿ ನಾರಿಯ ಬಸುರೊಳಗೆ ಗಂಡ ಬಂದು ಕುಳ್ಳಿರಲು, ಮಾಡಿದಡಿಗೆಯ ಮನವುಂಡು ಹೋಗಲು, ಮೇಲು ಕೈ ತಲೆ ಹಿಡಿದು ಸಂತೋಷದಿಂದ, ಪ್ರಾಣಸಖಿ ತನ್ನ ಗಂಡಂಗೆ ನೀಡುತ್ತಿರಲು, ಅರಳ ಹುಟ್ಟಿಗೆಯಲ್ಲಿ ಹೊರಳಿ ಕೂಡುವ ಭೇದ, ಮರಳಿ ಕೂಡಲಿಕೆಂತು ಪಣವಿಲ್ಲ. ಕೆರಳಿ ಮುನಿದು ಘುಡುಘುಡಿಸಿ ಗರ್ಜಿಸಲೊಡನೆ ಕೆರಳಲಮ್ಮದೆ ಅಂಜಿ ಒಳಗಡಗಿದ, ಶರಣಸತಿ ಲಿಂಗಪತಿಯೆಂಬ ಭಾಷೆ. ನೀನು ಹರನ ಬಟ್ಟೆಯ ನೋಡಿ ಸುಯ್ಯಬೇಡ, ಜನನ ಮರಣವಿರಹಿತ ಕೂಡಲಸಂಗನ ಅನುಭಾವ, ಪ್ರಭುವಿನ ಶ್ರೀಪಾದದೊಳಗಿದ್ದು ಸುಖಿಯಾದೆನು.