ಬಸವಣ್ಣ   
  ವಚನ - 1366     
 
ಶ್ರೀವಿಭೂತಿಯ ಬಿಟ್ಟು ತಪಸ್ಸು ಮಾಡಿದಡೆ ಆ ತಪಃಸಿದ್ಧಿ ಬಯಲು, ಶ್ರೀವಿಭೂತಿಯ ಬಿಟ್ಟು ದೀಕ್ಷೆಯ ಕೊಂಡಡೆ ಆ ದೀಕ್ಷೆ ಬಯಲು, ಶ್ರೀವಿಭೂತಿಯ ಬಿಟ್ಟು ಮಂತ್ರಗಳ ಸಾಧಿಸಿದಡೆ ಆ ಮಂತ್ರಸಿದ್ಧಿ ಬಯಲು, ಶ್ರೀವಿಭೂತಿಯ ಬಿಟ್ಟು ಯಜ್ಞಂಗಳ ಸಾಧಿಸಿದಡೆ ಆ ಯಜ್ಞಸಿದ್ಧಿ ಬಯಲು, ಶ್ರೀವಿಭೂತಿಯ ಬಿಟ್ಟು ದೇವತಾರ್ಚನೆಯ ಮಾಡಿದಡೆ ಆ ದೇವತಾರ್ಚನೆ ಬಯಲು, ಶ್ರೀವಿಭೂತಿಯ ಬಿಟ್ಟು ವಿದ್ಯವ ಸಾಧಿಸಿದಡೆ ಆ ವಿದ್ಯಾಸಿದ್ಧಿ ಬಯಲು. ಹಲವು ಕಾಲ ಕೊಂದ ಸೂನೆಗಾರನ ಕೈಯ್ಯ ಕತ್ತಿಯಾದಡೇನು ಪರುಷ ಮುಟ್ಟಲು ಹೊನ್ನಾಗದೇ ಅಯ್ಯಾ? ಲಲಾಟದಲ್ಲಿ ವಿಭೂತಿಯ ಧರಿಸಲ್ಕೆ, ಪಾಪಂಗಳು ಬೆಂದು ಹೋಗದಿಹವೇ ಕೂಡಲಸಂಗಮದೇವಾ?