ಬಸವಣ್ಣ   
  ವಚನ - 1378     
 
ಸಮತೆ ಸನ್ಮತದಿಂದ ನಿಜಗುಣಕಾರಣದಿಂದ ಸತ್ವರಜಸ್ತಮದ ಕ್ರೋಧ ಉಳಿಯದನ್ನಕ್ಕರ ಅನುಭಾವವೆಲ್ಲಿಯದೊ? ಆತ್ಮಸ್ತುತಿ, ಪರನಿಂದೆ, ಅಸಹ್ಯ, ಅನೃತ, (ಕು)ತರ್ಕ ಉಡುಗದನ್ನಕ್ಕರ ಅನುಭಾವವೆಲ್ಲಿಯದೊ? ಅರಿಷಡ್ವರ್ಗ ದಶವಾಯುಗಳ ವಿಕಳ ಅಪಾನ ಬಿಡದನ್ನಕ್ಕರ ಅನುಭಾವವೆಲ್ಲಿಯದೊ? ಮದ ಮತ್ಸರ ವೈತಾಳ ಸಂವಾದವಲ್ಲದೆ ಅನುಭಾವವೆಲ್ಲಿಯದೊ? ಸಮತೆ, ಸಜ್ಜನಿಕೆ,ಸಮಯಾಚಾರದ ನಿಜಪದವು ದುರಾಚಾರಿಗಳಿಗಳವಡುವುದೆ? ನಮ್ಮ ಕೂಡಲಸಂಗನ ಶರಣರಿಗಲ್ಲದೆ ಅನುಭಾವವೆಲ್ಲರಿಗೆಲ್ಲಿಯದೊ?