ವಚನ - 769     
 
ಅಯ್ಯಾ! ಅನುಭಾವವಿಲ್ಲದ ವಿರಕ್ತಿ ಆಯುಧವಿಲ್ಲದ ವೀರನಂತೆ. ಅನುಭಾವವಿಲ್ಲದ ಷಟ್‍ಸ್ಥಲವು ಕಣ್ಣಿಲ್ಲದ ಕುರುಡನಂತೆ. ಅನುಭಾವವಿಲ್ಲದ ಜಂಗಮವು ಕಾಲಿಲ್ಲದ ಹೆಳವನಂತೆ. ಅನುಭಾವವಿಲ್ಲದ ಶಿವಪೂಜೆಯ ಎಷ್ಟು ಮಾಡಿದಡೆಯು ಪ್ರಯೋಜನಕ್ಕೆ ಬಾರದು. ಅನುಭಾವವಿಲ್ಲದವನ ಲಿಂಗಪೂಜೆ ಬರಿಕೈಯಲ್ಲಿ ಹುಡಿಮಣ್ಣ ಹೊಯ್ದುಕೊಂಡಂತೆ. ಇದು ಕಾರಣ: ಭಕ್ತಿಗೆ ವಿರಕ್ತಿಗೆ ಮುಕ್ತಿಗೆ ವೀರಶೈವಕ್ಕೆ ಆಕಾರವಿಲ್ಲ. ಜಂಗಮಕ್ಕೆ ಅನುಭಾವವಿರಬೇಕು. ಅನುಭಾವವಿಲ್ಲದ ವಿರಕ್ತನಲ್ಲಿ ಪಾದೋದಕ ಪ್ರಸಾದವ ಕೊಳಲಾಗದು. ಅನುಭಾವವುಳ್ಳ ಆಚಾರ ಸಂಪನ್ನನಾದ ಸದ್ಭಕ್ತನಲ್ಲಿ ಅನಾದಿ ಪಾದೋದಕ ಪ್ರಸಾದವ ಕೊಂಡವರು ಪರಮ ಮುಕ್ತರಾದರಯ್ಯಾ, ನಿಜಗುರು ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣಾ.