ವಚನ - 864     
 
ಆಚಾರ ಅನಾಚಾರವೆಂದು ಎರಡು ಪ್ರಕಾರವಾಗಿಪ್ಪುದು. ಆಚಾರವೆಂದಡೆ ಹೇಳಿಹೆ ಕೇಳಿರೊ: ಸರ್ವಪದಾರ್ಥಂಗಳು ಇದಿರಿದ್ದಲ್ಲಿ ಆ ಪದಾರ್ಥಂಗಳ ಶುದ್ಧವ ಮಾಡಿ ಲಿಂಗಕ್ಕೆ ಸಮರ್ಪಿಸುವಲ್ಲಿ ಭೋಜ್ಯಭೋಜ್ಯಕ್ಕೆ ಶಿವಮಂತ್ರಯುಕ್ತನಾಗಿ ಪ್ರಸಾದಗ್ರಾಹಕನಾಗಿರಬಲ್ಲಡೆ ಆತನೆ ಪ್ರಸಾದಿ, ವೀರಮಾಹೇಶ್ವರನೆಂಬೆ. ತಟ್ಟುವ ಮುಟ್ಟುವ ತಾಗು[ವ] ನಿರೋಧವೆಲ್ಲವನು ಹಲ್ಲುಕಡ್ಡಿ ದರ್ಪಣ ಮೊದಲಾದ ಸರ್ವವ್ಯವಹಾರದಲ್ಲಿ ಆವುದಾನೊಂದು ಭೋಗಿಸಲು, ಆವುದಾನೊಂದು ಕ್ರೀಡಿಸಲು ಲಿಂಗವೆ ಪ್ರಾಣವಾಗಿರಬಲ್ಲಡೆ ಆ ಮಹಾಂತನೆ ಸರ್ವಾಚಾರಸಂಪನ್ನನೆಂಬೆ. ಅಂತಪ್ಪ ಮಹಾತ್ಮನ ತ್ರಿವಿಧಮುಖವನರಿದು ಕರುಣಪೂರಿತನಾಗಿ ಪ್ರಸಾದವ ಕೊಂಡಡೆ ಪಾವನವೆಂಬೆ ಆತನ ಕೇವಲ ಮಹಾನುಭಾವ ಪರಮಜ್ಞಾನಪರಿಪೂರ್ಣನೆಂಬೆ, ಆ ಮಹಾತ್ಮನೆ ತ್ರೈಜಗದೊಡೆಯನೆಂಬೆ ಗುಹೇಶ್ವರಾ.