ವಚನ - 1279     
 
ಭಕ್ತಿವಿಡಿದು ಭಕ್ತನಾದ ಪ್ರಸಾದಿ. ಮೋಕ್ಷವಿಡಿದು, ಧೈರ್ಯವಿಡಿದು ಆ ಭಕ್ತಂಗೆ ಮಾಹೇಶ್ವರನಾದ ಪ್ರಸಾದಿ; ಕಾರಣವಿಡಿದು ಅವಧಾನ ತಪ್ಪದ ಆ ಭಕ್ತಂಗೆ ಪ್ರಸಾದಿಯಾದ ಪ್ರಸಾದಿ; ಕರ್ಮರಹಿತನಾಗಿ ಕಾಲಕಲ್ಪಿತವಿಲ್ಲದ ಆ ಭಕ್ತಂಗೆ ಪ್ರಾಣಲಿಂಗಿಯಾದ ಪ್ರಸಾದಿ. ಪತಿಭಕ್ತಿವಿಡಿದು ಧರ್ಮಾರ್ಥಕಾಮಮೋಕ್ಷಂಗಳಾಸೆಯ ನಿವೃತ್ತಿಯಂ ಮಾಡಿದ ಆ ಭಕ್ತಂಗೆ ಶರಣನಾದ ಪ್ರಸಾದಿ; ಈ ಉಭಯ ಸಮರಸವೇಕವೆಂದು ತಿಳಿದು, ಉಭಯಭಾವ ಉರಿಕರ್ಪೂರ ಸಂಯೋಗವಾದ ಆ ಭಕ್ತಂಗೆ ಐಕ್ಯನಾದ ಪ್ರಸಾದಿ. ನಮ್ಮ ಕಪಿಲಸಿದ್ದಮಲ್ಲಿನಾಥನಲ್ಲಿ, ಸರ್ವಕ್ಕೆ ಚೈತನ್ಯವಾದ ನಮ್ಮ ಚೆನ್ನಬಸವಣ್ಣನೆಂಬ ಅಚ್ಚಪ್ರಸಾದಿ.