ವಚನ - 1391     
 
ಭಕ್ತ-ಜಂಗಮದ ಸಕೀಲಸಂಬಂಧವನು ಆರು ಬಲ್ಲರು ಹೇಳಾ? ಅರ್ಥವನೊಪ್ಪಿಸಿದಾತ ಭಕ್ತನಲ್ಲ, ಪ್ರಾಣವನೊಪ್ಪಿಸಿದಾತ ಭಕ್ತನಲ್ಲ, ಅಭಿಮಾನವನೊಪ್ಪಿಸಿದಾತ ಭಕ್ತನಲ್ಲ. ಅದೇನು ಕಾರಣವೆಂದಡೆ, ಸತ್ಯಸದಾಚಾರಕ್ಕೆ ಸಲ್ಲನಾಗಿ. ಆ ಭಕ್ತನ ಮನೆಯ ಹೊಕ್ಕು, ಪಾದಾರ್ಚನೆಯ ಮಾಡಿಸಿಕೊಂಡು ಒಡಲ ಕುಕ್ಕಲತೆಗೆ ಅಶನವನುಂಡು, ವ್ಯಸನದ ಕಕ್ಕುಲತೆಗೆ ಹಣವ ಬೇಡಿ, ಕೊಟ್ಟಡೆ ಕೊಂಡಾಡಿ ಕೊಡದಿರ್ದಡೆ ದೂರಿಕೊಂಡು ಹೋಹಾತ ಜಂಗಮವಲ್ಲ. ಆದಿ ಅನಾದಿಯಿಂದಲತ್ತತ್ತ ಮುನ್ನಲಾದ, ಮಹಾಘನವ ಭೇದಿಸಿ ಕಂಡು ಅರಿದು ಕಾಯದ ಜೀವದ ಹೊಲಿಗೆಯ ಬಿಚ್ಚಿ ಬೀಸಾಡಿ, ತನ್ನನೆ ಅರ್ಪಿಸಿ ಇರಬಲ್ಲಾತ ಭಕ್ತ. ಸುಳುಹಿನ ಸೂತಕ ಮೈದೋರದೆ, ಒಡಲ ಕಳವಳದ ರುಚಿಗೆ ಹಾರೈಸದೆ, ಅರಿವೆ ಅಂಗವಾಗಿ ಆಪ್ಯಾಯನವೆ ಭಕ್ತಿಯಾಗಿ, ಕಿಂಕುರ್ವಾಣವೆಂಬ ಶಿವಮಂತ್ರಕ್ಕೆ ನಮೋ ನಮೋ ಎನಬಲ್ಲಡೆ ಆತ ಜಂಗಮ. ಆ ಜಂಗಮದ ಆ ಭಕ್ತನ ಸಮ್ಮೇಳವೆ ಸಮ್ಮೇಳ. ಮಿಕ್ಕಿನ ಅರೆಭಕ್ತರ ಒಡತಣ ಸಂಗ ನಮ್ಮ ಗುಹೇಶ್ವರಲಿಂಗಕ್ಕೆ ಸೊಗಸದು.