ವಚನ - 1533     
 
ಸಂಗದಿಂದಾಯಿತ್ತು ತನು, ಆ ತನುವಿಂದಾಯಿತ್ತು ಮರವೆ, ಆ ಮರವೆಯಿಂದಾಯಿತ್ತು ನೋಡಾ 'ನೀ' 'ನಾ' ಎಂಬುದು. ನೀನೆಂಬ ಬಹಿರಂಗವಂತಿರಲಿ ನಾನೆಂಬ ಅಂತರಂಗವಂತಿರಲಿ- ಈ ಉಭಯ ಭಾವವಲ್ಲದೆ, ನಿನ್ನಿಂದ ನಿನ್ನನರಿದಹೆನೆಂಬುದು ವಿಪರೀತಭಾವ! ಈ ಅರಿವು ಮರವೆಯಾಟದ ಭ್ರಾಂತು ಬಿಡದು. ಗುಹೇಶ್ವರಲಿಂಗವು ನಿನ್ನಲ್ಲಿ ನಿಂದ ಪರಿ ಎಂತು ಹೇಳಾ ಸಂಗನಬಸವಣ್ಣಾ.