ವಚನ - 1445     
 
ನೀ ಒಲಿವ ಮುಖ ತಿಳಿಯದು ನೋಡಯ್ಯಾ ಆರಿಂಗೆ- ಬ್ರಾಹ್ಮಣನ ಮೃಷ್ಟಾನ್ನವ ಬಿಟ್ಟು, ಬೇಡನ ಮಾಂಸಕ್ಕೊಲಿದೆ ದೇವಾ; ಸೌಂದರಚೋಳನ ನೈವೇದ್ಯವನೊಲ್ಲದೆ, ಚೋಳಿಯಕ್ಕನ ಉಚ್ಛಿಷ್ಟಕ್ಕೆ ಮೈಗೊಟ್ಟೆ ದೇವಾ; ಚೋಳನ ಭೋಜನವನೊಲ್ಲದೆ, ಚೆನ್ನಯ್ಯನಕೂಡ ಜಾತಿಗೆಟ್ಟು ಮೈಗೊಟ್ಟು ಒಲಿದೆ ದೇವಾ; ಒಲಿಸಿಹೆನೆಂದಡೆ ಅಸಾಧ್ಯ! ಒಲಿಯನೆಂದಡೆ, ಒಂದರಗಳಿಗೆ ಶ್ವೇತಗೆ ಪದವ ಕೊಟ್ಟೆ ದೇವಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನದೇವಾ.