ವಚನ - 1058     
 
ಕಲ್ಪಿತವೆಂಬ ಭಕ್ತ ಮಾಡಿದ ಸಯಧಾನವ ನೋಡಾ! ಅನಂತಕೋಟಿ ಅಜಾಂಡಗಳೆ ಸಯಧಾನವಾಗಿ ಸವಿಕಲ್ಪ ವಿಷಯಂಗಳೆ ಶಾಕವಾಗಿ ಸರ್ವವಾಸನೆ ಎಂಬುದೆ ಅಭಿಘಾರವಾಗಿ ಇವೆಲ್ಲವನೂ ಜ್ಞಾನವೆಂಬ ಭಾಜನದಲ್ಲಿ ಎಡೆಮಾಡುತ್ತಿರಲು ಉಣ ಬಂದ ಹಿರಿಯರು ಉಣುತ್ತಿದ್ದುದ ನೋಡಿರೆ! ನಿರ್ವಿಕಲ್ಪಿತವೆಂಬ ಮಹಂತ ಬರಲು, ಸಯಧಾನವಡಗಿತ್ತು, ಭಾಜನ ಉಳಿಯಿತ್ತು. ಆ ಭಾಜನವನುತ್ತಮಾಂಗದಲ್ಲಿ ಅಳವಡಿಸಿಕೊಳಲು ನಿಶ್ಚಿಂತವಾಯಿತ್ತು ಗುಹೇಶ್ವರಾ.