ವಚನ - 1528     
 
ಶ್ರುತಿಯ ನಂಬದಿರೊ, ಶ್ರುತಿಯ ನಂಬದಿರೊ ಶ್ರುತಿತತಿಗಳು ಮುನ್ನವೆ ಶಿವನಡಿಯ ಕಾಣದೆ `ಚಕಿತಮಭಿದತ್ತೇ' ಎನುತ್ತ ಮುನ್ನವೆ ಅರಸಿ ತೊಳಲಿ ಬಳಲುತ್ತೈದಾವೆ. ಶ್ರುತಿ ಹೇಳಿದತ್ತ ಹರಿಹರಿದು ಬಳಲದಿರೊ, ಶೂನ್ಯಕ್ಕೆ ತಲೆವಾರನಿಕ್ಕದಿರೊ, ವಸ್ತು ಭ್ರೂಮಧ್ಯದಲುಂಟೆಂದು ನೆನೆಯದಿರೊ. ವಸ್ತು ಭ್ರೂಮಧ್ಯದಲುಂಟೆಂದು ಭ್ರಮಿಸದಿರೊ. ವಸ್ತು ಬ್ರಹ್ಮರಂಧ್ರದಲುಂಟೆಂದು ಹೊಲಬುಗೆಡದಿರೊ. ವಸ್ತುವ ಕಾಬಡೆ, ಎನ್ನ ಸದ್ಗುರು ಅನಿಮಿಷದೇವನಂತೆ ನಿನ್ನ ಕರಸ್ಥಲದಲ್ಲಿ ನಿಶ್ಚಯಿಸಿ, ವಸ್ತುನಿಶ್ಚಯವ ಕಂಡು ನಮ್ಮ ಗುಹೇಶ್ವರಲಿಂಗದಲ್ಲಿ ನಿಬ್ಬೆರಗಾಗೊ ಮರುಳೆ.