ವಚನ - 720     
 
ಅಂಗಸಂಸಾರ ಲಿಂಗದಲ್ಲಿ ಅರತು ಕಾಯವೆಂಬ ಸಂಬಂಧ ಸಂಶಯವಳಿದು ನಿಸ್ಸಂದೇಹಿಯಾಗಿಪ್ಪನು ನೋಡಾ ಬಸವಣ್ಣನು. ಪ್ರಾಣ ಭಾವವೆಂಬ ಶಂಕೆ ತಲೆದೋರದೆ ನಿಶ್ಶಂಕ ನಿಜೈಕ್ಯನಾಗಿಪ್ಪನು ನೋಡಾ ಬಸವಣ್ಣನು. ಆ ಬಸವಣ್ಣನ ಅಂತರಂಗದಲ್ಲಿ ನಿಶ್ಚಿಂತನಿವಾಸಿಯಾಗಿದ್ದೆನು. ಆ ಬಸವಣ್ಣನ ಅಂತರಂಗದಲ್ಲಿ ನಿರಾಲಂಬ ಜ್ಞಾನಿಯಾಗಿದ್ದೆನು. ಆ ಬಸವಣ್ಣನೊಳಗೆ ನಾನು ಅಳಿದುಳಿದೆನು. ಬಸವಣ್ಣನೆನ್ನ ಅಂತರಂಗದೊಳಗೆ ನಿಜನಿವಾಸಿಯಾಗಿದ್ದನು. ಇದು ಕಾರಣ: ಒಂದನೊಂದ ಬಿಚ್ಚಿ ಬೇರೆ ಮಾಡಬಾರದು ನೋಡಾ. ಗುಹೇಶ್ವರಲಿಂಗದಲ್ಲಿ `ಸಂಗನಬಸವ-ಪ್ರಭು'ವೆಂಬ ಎರಡು ಭಾವಭ್ರಾಂತಿಯಳಿದುಳಿದು, ನಿಭ್ರಾಂತಿ ಎಡೆಗೊಂಡಿತ್ತು ನೋಡಾ ಚೆನ್ನಬಸವಣ್ಣಾ.