ವಚನ - 443     
 
ಕಾಯವ ನಿಶ್ಚೈಸಲಿಲ್ಲ, ಜೀವವ ನಿಶ್ಚೈಸಲಿಲ್ಲ; ಕಾಯ ಜೀವ ಎರಡಕ್ಕೂ ನೆಲೆಯಿಲ್ಲವಯ್ಯಾ. ಸುಖವ ನಿಶ್ಚೈಸಲಿಲ್ಲ, ದುಃಖವ ನಿಶ್ಚೈಸಲಿಲ್ಲ; ಸುಖ-ದುಃಖ ಎರಡಕ್ಕೂ ನೆಲೆಯಿಲ್ಲವಯ್ಯಾ. ರಾಜ್ಯವ ನಿಶ್ಚೈಸಲಿಲ್ಲ, ಲಕ್ಷ್ಮಿಯ ನಿಶ್ಚೈಸಲಿಲ್ಲ; [ರಾಜ್ಯ-ಲಕ್ಷ್ಮಿ ಎರಡಕ್ಕೂ ನೆಲೆಯಿಲ್ಲವಯ್ಯಾ] ಅಭ್ರಚ್ಛಾಯೆ, ಮರೀಚಿಕಾಜಲ, ಮಹೇಂದ್ರಜಾಲವಯ್ಯಾ ನನ್ನದು. ಮನೆ ನನ್ನದು, ಧನ ನನ್ನದು ಎಂಬ ಮರುಳ ಕೇಳಾ- ಕನಸಿನ ಸುಖ ಕಣ್ದೆರೆದಲ್ಲಿ ಹೋಯಿತ್ತು. ಹಾಲುಳ್ಳಲ್ಲಿ ಹಬ್ಬವ ಮಾಡಿ, ಗಾಳಿಯುಳ್ಳಲ್ಲಿ ತೂರಿಕೊಳ್ಳಿರಿ; ಬಳಿಕಲರಸಿದರುಂಟೆ? ಪರಮ ಸುಖವು. ನಿಜಗುರು ಕಪಿಲಸಿದ್ಧಮಲ್ಲಿಕಾರ್ಜುನನ ಹರಿಗೋಲುಳ್ಳಲ್ಲಿ ತೊರೆಯ ದಾಂಟಿದೆ.