ವಚನ - 768     
 
ಪೂರ್ವಸಿಂಹಾಸನದಲ್ಲಿ, ಮಹಾಪರ್ವತದ ಮಸ್ತಕದಲ್ಲಿ, ಆ ಪರ್ವತಕ್ಕೆ ಕಾವಲು ಒಂಬತ್ತಾಗಿ, ಆ ಒಂಬತ್ತ ಕೂಡಿದ ದ್ವಾರ ಕೆಳಗಾಗಿ, ಅದರಿಂದ ನಡೆಯುತಿದ್ದು ಸಕಲ ವ್ಯವಹಾರಂಗಳು. ಆ ಪೂರ್ವದ್ವಾರದಲ್ಲಿ ಮಹಾಜ್ವಲ, ಮಹಾಜ್ವಲದಲ್ಲಿ ಗಂಭೀರ ಕಮಲ, ಗಂಭೀರ ಕಮಲದಲ್ಲಿ ಭವಿಸಿದಗ್ನಿ, ಪೂರ್ವದ್ವಾರವ ತಾಗೆ ಅಲ್ಲಿದ್ದ ವಾಯುರಾಜನು ದುರ್ಗ ಒಂಬತ್ತಕ್ಕೆ ಒಂದೇ ದ್ವಾರದಲ್ಲಿ ದಾಳಿಯನಿಟ್ಟು ನಾಯಕ ದುರ್ಗದಲ್ಲಿದ್ದ ಸುಗುಣ ಸುಜ್ಞಾನವೆಂಬ ಸರೋವರ ಹೊಕ್ಕು, ಮೂರು ಮೆಟ್ಟಿನ ಭಾವಿಯನ್ನಿಳಿದು, ಆ ಜಲವ ಕದಡಲಾಗಿ ಬಪ್ಪ ಬಾಹತ್ತರ ನಿಯೋಗದ ಧಾಳಾಧಾಳಿಯಂ ಕಂಡು, ಅಯ್ಯ, ಜಲವ ಹೋಗೆ ಇವರು ಕದಡಿದ ಜಲದೊಳಗೆ ಹೋದವರೆಲ್ಲಾ ಮುಕ್ತರಾ, ನೀನೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಹಿಡಿಗೊಳಗಾದ.