ವಚನ - 967     
 
ಲೋಕದ ಲೋಕಿಗಳು ಏಕಯ್ಯಾ ನುಡಿವರು ಲೋಕನಾಥನಿಪ್ಪ ಠಾವನರಿಯರು. ಕಲ್ಲೊಳಗೆ ಹೇಮ, ಕಾಷ್ಠದೊಳಗಗ್ನಿ, ತಿಲದೊಳು ತೈಲ, ಜಲದೊಳು ಮುತ್ತು, ಹಾಲೊಳು ತುಪ್ಪ, ಸ್ಥಲದೊಳಗೆ ರತ್ನವಿಪ್ಪ ಪರಿಯಲ್ಲಿ ನೀವಿಪ್ಪ ಭೇದವ ನರರೆತ್ತ ಬಲ್ಲರೈ, ಕಪಿಲಸಿದ್ಧಮಲ್ಲಿಕಾರ್ಜುನ.