ವಚನ - 1005     
 
ಶುದ್ಧದಲ್ಲಿ ಪ್ರವೇಶಿಸಿ, ಸಿದ್ಧದಲ್ಲಿ ಪ್ರಕಟಿಸಿ, ಪ್ರಸಿದ್ಧದಲ್ಲಿ ಭೇದಿಸಿಯಿಪ್ಪ ಸಜ್ಜನ ಶುದ್ಧಶಿವಾಚಾರಂಗೆ ನಿತ್ಯ ಲಿಂಗಾರ್ಚನೆ, ನಿತ್ಯ ಜಂಗಮಾರ್ಚನೆ, ನಿತ್ಯ ಕೊಂಬುದು ಪಾದೋದಕ, ನಿತ್ಯ ಕೊಂಬುದು ಪ್ರಸಾದ. ತಾಂ ನಿತ್ಯನಾಗಿ ಅನ್ಯದೈವಕ್ಕೆರಗ, ಅನ್ಯವ ಬಗೆಯ, ಪಾದೋದಕಕ್ಕಲ್ಲದೆ ಬಾಯ್ದೆರೆಯ, ಪ್ರಸಾದವನಲ್ಲದೆ ಗ್ರಹಿಸ, ಪಾದೋದಕ ಪ್ರಸಾದವಲ್ಲದೆ ಕೊಂಡಡೆ ಅನಾಚಾರ ಹೊದ್ದೀತೆಂದು ಕಪಿಲಸಿದ್ಧಮಲ್ಲಿಕಾರ್ಜುನನ ಏಕೀಭವಿಸಿದ ಲಿಂಗತ್ರಯದಲ್ಲಿ ನಿತ್ಯ ಪ್ರಸಾದಿ.