ವಚನ - 1144     
 
ಹೃದಯಕಮಲದ ಅಷ್ಟದಳದ ದ್ವಾತ್ರಿಂಶತ್‍ಕುಸುಮ ಮಧ್ಯದಲ್ಲಿಪ್ಪನಾ ಸೂರ್ಯ. ಆ ಸೂರ್ಯನ ಮಧ್ಯದಲ್ಲಿಪ್ಪನಾ ಚಂದ್ರ ಆ ಚಂದ್ರನ ಮಧ್ಯದಲ್ಲಿಪ್ಪನಾ ಅಗ್ನಿ ಆ ಅಗ್ನಿಯ ಮಧ್ಯದಲ್ಲಿಪ್ಪುದಾ ಕಾಂತಿ ಆ ಕಾಂತಿಯ ಮಧ್ಯದಲ್ಲಿಪ್ಪುದಾ ಸುಜ್ಞಾನ. ಆ ಸುಜ್ಞಾನದ ಮಧ್ಯದಲ್ಲಿಪ್ಪುದಾ ಚಿದಾತ್ಮ. ಆ ಚಿದಾತ್ಮನ ಮಧ್ಯದಲ್ಲಿಪ್ಪುದಾ ಚಿತ್ಪ್ರಕಾಶರೂಪನಪ್ಪ ಪರಶಿವನು. ಇಂತಪ್ಪ ಪರಶಿವನ- ಎನ್ನ ಸುಜ್ಞಾನಕಾಯದ ಮಸ್ತಕದ ಮೇಲೆ ಹಸ್ತವನಿರಿಸಿ, ಮನ ಭಾವ ಕರಣೇಂದ್ರಿಯಂಗಳಿಂ ಸ್ವರೂಪೀಕರಿಸಿ, ದೃಷ್ಟಿಗೆ ತೋರಿ, ಕೈಯಲ್ಲಿ ಲಿಂಗವ ಕೊಟ್ಟ ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನಯ್ಯಾ ಪ್ರಭುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.