ವಚನ - 1271     
 
ಅಧ್ಯಾತ್ಮ ಅಧ್ಯಾತ್ಮವೆಂದೆಂಬಿರಿ, ಅಧ್ಯಾತ್ಮವಾರಿಗೆ ? ಶ್ರೀಗುರು ಬಹಳವಪ್ಪ ಶಿವಲಿಂಗವ ಸೂಕ್ಷ್ಮವ ಮಾಡಿ, ಕರಸ್ಥಲದಲ್ಲಿ ಕೊಟ್ಟ ಬಳಿಕ ಬೇರೆ ಯೋಗವುಂಟೆ ? ತನ್ನ ಹಸ್ತವ ಮಸ್ತಕದಲ್ಲಿಟ್ಟು ವಾಯುಪ್ರಾಣಿಯಾಗಿರ್ದುದ ಕೊಂದು ಲಿಂಗಪ್ರಾಣಿಯ ಮಾಡಿದ ಬಳಿಕ, ಅಕ್ಷರವೈದರಲ್ಲಿ ಮುಕ್ತನ ಮಾಡಿದ ಬಳಿಕ, ಮರಳಿ ಯೋಗವುಂಟೆ ಶಿವಯೋಗವಲ್ಲದೆ? ಲಿಂಗಾರ್ಚನೆಯ ಮಾಡಿ ಜಂಗಮಪ್ರಸಾದವ ಕೊಂಡ ಬಳಿಕ, ಬರಿಯ ಯೋಗಕ್ಕೆ ಒಡಂಬಡುವುದೆ ಅರಿವು? ಇಂತಪ್ಪವನತಿಗಳೆದು ಶುದ್ಧ ಶಿವಯೋಗಿಯ ಮಾಡಿದಾತ ಚೆನ್ನಬಸವಣ್ಣ. ಮಾಹಲೋಕದಲ್ಲಿಪ್ಪ ಆದ್ಯಕ್ಷರದ್ವಯವ ಭೇದಿಸಿತಂದು ಕರಸ್ಥಲದಲ್ಲಿರಿಸಿ, ಇದು ಉರುತರ ಪದವೆಂದು ತೋರಿಕೊಟ್ಟು, ಎನ್ನ ತನ್ನಂತೆ ಮಾಡಿದ ಗುರು ಚೆನ್ನಬಸವಣ್ಣ. ಆನು ಚೆನ್ನಬಸವಣ್ಣನ ಕರುಣದಿಂದ ಅಭ್ಯಾಸಯೋಗವನತಿಗಳೆದು, ಶಿವಯೋಗದಲ್ಲಿ ನಿತ್ಯನಾಗಿ, ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಎಂಬ ಷಡುಸ್ಥಲಕ್ಕೆ ಅಧಿಕಾರಿಯಾದೆನು, ನಿನ್ನವರ ಸಲುಗೆಗೆ ಸಂದೆನು. ಚೆನ್ನಬಸವಣ್ಣನ ಕೃಪೆ ಎನ್ನನಿಂತು ಮಾಡಿತ್ತು ಕಾಣಾ, ಶ್ರೀಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ.