ವಚನ - 1326     
 
ಪದ್ಮಾಸನದಲ್ಲಿ ಕುಳ್ಳಿರ್ದು, ಕುಂಡಲಿಯ ಸ್ಥಾನವನರಿದು, ಅಂಡಲೆವ ಅಧೋವಾಯುವ ಊರ್ಧ್ವಮುಖವ ಮಾಡಿ ಷಡಂಗುಲವನೊತ್ತಿ ಊರ್ಧ್ವ ವಾಯುವನಧೋಮುಖಕ್ಕೆ ತಂದು ಉತ್ತರಪೂರ್ವದಕ್ಷಿಣವನತಿಗಳೆದು ಪಶ್ಚಿಮದ ಸುಷುಮ್ನೆಯಲ್ಲಿ ಮನಶ್ಶಕ್ತಿಸಂಧಾನಸಂಯೋಗದಿಂದ ಸಹಸ್ರದಳಕಮಲದಲ್ಲಿ ನಾದಬ್ರಹ್ಮವನೆಯ್ದಿ, ಮಹಾವಾಸನಾಮೃತವ ದಣಿಯುಂಡು ತ್ರಿಸಂಧಾನ ಒಂದಾದ ಬಳಿಕ-ಆತ್ಮ ಪರಮಾತ್ಮ ಇಂತಾಗಿ, ಅಂತರಾತ್ಮ ವಿಚಾರಕ್ಕೆ ಇಳಿದಲ್ಲಿ ಅಭ್ಯಾಸಕ್ಕೆ ಬರಲಾಗದು, ಅದೆಂತೆಂದಡೆ: ದೇವಲೋಕಕ್ಕೆ ಸಂದು ಮರಳಿ ಮಾನವನಪ್ಪಡೆ ಅದೇ ಪಾತಕ ಹಸಿದವನಮೃತವನುಂಡು, ಮರಳಿ ಹಸಿದು, ಉಂಡಿಹೆನೆಂದಡೆ ಅದೇ ಪ್ರಕೃತಿ ಗುಣ. ಇದು ಕಾರಣ, ಪರಮಾತ್ಮ ತಾನಾದಾತನು, ಪರಮಾತ್ಮ ತಾನಾದನಾಗಿ ತನ್ನಲ್ಲಿ ತಾನೆ ಏಕೀ ಭವಿಸಿರಬೇಕು, ಗುಹೇಶ್ವರಾ.