ವಚನ - 451     
 
ಕುಂಕುಮದ ಗಿರಿ ಕೊನೆಯೇರಿ ಬೆಳೆಯೆ, ಆಯತವಿಡಿದು ಸುಖವ ಕಂಡು ಅನುಭವದವಳಿಗೆ [ಪಚ್ಚವರ್ಣ] ಸುಖವನೇಕೀಕರಿಸಿ ನೋಡಲು ಆಯತವಾಯಿತ್ತಯ್ಯಾ ಕುಂಕುಮದ [ಹನ್ನೆರಡಸಳ] ಪೀಠ. ಆ ಪೀಠದಲ್ಲಿ ವೀರಭೃತ್ಯನೆಂಬವ ನಿಂದು, ಜಂಗಮವಿಡಿದು ನಡೆಯೆ, ಅನಿಲಗುಣ ಕೆಟ್ಟು ನೆಲೆಗೊಂಡನಯ್ಯಾ ನಿಮ್ಮ ಶರಣ ಚೆನ್ನಬಸವಣ್ಣನು, ಕಪಿಲಸಿದ್ಧಮಲ್ಲಿನಾಥಯ್ಯಾ, ಚೆನ್ನಬಸವಣ್ಣನಿಂದ ಬದುಕಿದೆನಯ್ಯಾ.