ವಚನ - 1019     
 
ಷಡಾಧಾರದಲ್ಲಿ ಅಡಿಗದ್ದಿ ಹೋದವರ ಕಂಡೆ. ತತ್ತ್ವಂಗಳ ಗೊತ್ತ ಹೇಳಿ ಮುಟ್ಟದೆ ಹೋದವರ ಕಂಡೆ. ಮಾತಿನ ಮಾಲೆಯನಾಡಿ ವಸ್ತುವನರಿಯದೆ ಭ್ರಾಂತರಾಗಿ ಕೆಟ್ಟವರ ಕಂಡೆ. ಅಷ್ಟಾಂಗಯೋಗವ ಮಾಡಿಹೆನೆಂದು ಘಟಕೆಟ್ಟು ನಷ್ಟವಾದವರ ಕಂಡೆ. ಇಂತಿದನರಿದು ಕರ್ಮಯೋಗವ ಮಾಡದೆ ಮರ್ಮಜ್ಞನಾಗಿ ಸರ್ವಗುಣಸಂಪನ್ನನಾಗಿ ನಿಜವನರಿದಾತಂಗೆ ತನಗೇನು ಅನ್ಯಭಿನ್ನವಿಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ.