ವಚನ - 986     
 
ಎಲೆ ಮನವೆ; ನೀ ನಿನ್ನ ನಿಜವ ತಿಳಿವಡೆ ಆ ನಿನ್ನ ನಿಜವ ಹೇಳುವೆ ಕೇಳು: ಅದು ಕೇವಲ ಜ್ಯೋತಿ, ಅದು ವರ್ಣಾತೀತ. ನೀನದನರಸುವಾಗ ನಿನಗಾವಲ್ಲಿ ನಿಶ್ಚಯ ತೋರಿತ್ತು, ಅದೀಗ ನಿನ್ನ ಪರಿಪೂರ್ಣತ್ವದ ನೆಲೆ. ಆ ನಿನ್ನ ನಿಜವ ನಿಶ್ಚಯಿಸಿ ನೀ ನಿರ್ಗಮನಿಯಾದಲ್ಲಿ ಅದೇ ನಿನ್ನ ಸಮ್ಯಕ್‍ಜ್ಞಾನದ ತೋರಿಕೆ! ಆ ತೋರಿಕೆಯ ಅಖಂಡ ಬೆಳಗಿನ ಹೊಳಹಿನೊಳಗೆ ನೀ ನಮ್ಮ ಗುಹೇಶ್ವರಲಿಂಗದ ಶ್ರೀಚರಣವನರಸಿಕೊಂಡು ನಿಶ್ಚಿಂತನಾಗೆಲೆ ಮನವೆ.