ವಚನ - 799     
 
ಅಯ್ಯಾ! ಮುಂದೆ ಮರ್ತ್ಯಲೋಕದ ಮಹಾಗಣಂಗಳು ಸದ್ಭಕ್ತಿ, ಸದಾಚಾರ, ಸತ್ಕ್ರಿಯಾ, ಸಮ್ಯಜ್ಞಾನ, ಆಜ್ಞಾದೀಕ್ಷೆ ಮೊದಲಾದ ಇಪ್ಪತ್ತೊಂದು ದೀಕ್ಷೆಯ ವಿಚಾರ, ತ್ರಿವಿಧ ಸ್ಥಲ, ಷಟ್ಸ್ಥಲ, ದಶವಿಧಪಾದೋದಕ, ಏಕಾದಶಪ್ರಸಾದ, ಷೋಡಶಾವರಣ, ನೂರೆಂಟುಸಕೀಲು ಮೊದಲಾದ ಸಮಸ್ತಸಕೀಲದ ಅರ್ಪಿತ-ಅವಧಾನಂಗಳು, ಮೂಲಪ್ರಣಮ ಮೊದಲಾಗಿ ಮಹಾಮಂತ್ರಗಳು, ಸರ್ವಾಚಾರ ಸಂಪತ್ತಿನ ಲಿಂಗಾನುಭಾವದ ನಡೆ-ನುಡಿಯ ವಿಚಾರವು ಷಡ್ವಿಧಶೀಲ, ಷಡ್ವಿಧವ್ರತ, ಷಡ್ವಿಧನೇಮದ ಕಲೆನೆಲೆಯ ಸನ್ಮಾರ್ಗವು, ಇಂತೀ ಸ್ವಸ್ವರೂಪುನಿಲುಕಡೆಯ ನಿಷ್ಕಲಂಕ ಪರಶಿವಮೂರ್ತಿ ಸದ್ಗುರು ಲಿಂಗಜಂಗಮದಿಂ ಪಡೆದು ಪರುಷಮುಟ್ಟಿದ ಲೋಹ ಬಂಗಾರವಾಗಿ ಮರಳಿ ಲೋಹವಾಗದಂತೆ, ಪಾವನಾರ್ತವಾಗಿ ಸ್ವಯ-ಚರ-ಪರ, ಆದಿ-ಅಂತ್ಯ-ಸೇವ್ಯಸ್ಥಲ ಮೊದಲಾದ ಷಟ್ಸ್ಥಲಮಾರ್ಗವಿಡಿದಾಚರಿಸುವಲ್ಲಿ ಭಕ್ತಮಾಹೇಶ್ವರ ಶರಣಗಣಂಗಳು ಸಮಪಂಙ್ತಿಯಲ್ಲಿ ಸುಗಂಧ, ಸುರಸ, ಸುರೂಪು, ಸುಸ್ಪರ್ಶನ ಸುಶಬ್ದ, [ಸುಪರಿಣಾಮ], ಮಧುರ, ಒಗರು, ಕಾರ, ಹುಳಿ, ಕಹಿ, ಲವಣ, ಪಂಚಾಮೃತ ಮೊದಲಾದ ಪದಾರ್ಥದ ಪೂರ್ವಾಶ್ರಯವ ಕಳೆದು, ಮಹಾಘನಲಿಂಗಮುಖದಲ್ಲಿ ಶುದ್ಧ-ಸಿದ್ಧ-ಪ್ರಸಿದ್ಧ, ರೂಪು-ರುಚಿ-ತೃಪ್ತಿಗಳ ಮಹಾಮಂತ್ರ ಧ್ಯಾನದಿಂದ ಸಮರ್ಪಿಸಿ ಆ ಲಿಂಗದ ಗರ್ಭದಿ ನೆಲಸಿರ್ಪ ನಿರಂಜನಜಂಗಮದಿಂ ಮಹಾಪ್ರಸಾದವ ಪಡೆದು, ತಾನೆ ಪ್ರಾಣಲಿಂಗವೆಂದು ಎರಡಳಿದು, ಪರಿಶಿವಲಿಂಗಲೀಲೆಯಿಂ ಭೋಗಿಸುವ ಸಮಪಂಙ್ತಿಯ ಮಧ್ಯದಲ್ಲಿ ಆವ ಗಣಂಗಳಾದರು ಸರಿಯೆ, ಪ್ರಸಾದ ನಮಗೆ ಹೆಚ್ಚಾಯಿತ್ತೆಂದು ತ್ರಿವಿಧದೀಕ್ಷಾಹೀನವಾದ ಉಪಾಧಿಲಿಂಗಭಕ್ತಂಗೆ ಒಲ್ಮೆಯಿಂದ ಶರಣಾಗೆಂದು ಕೊಡುವವನೊಬ್ಬ ಅಯೋಗ್ಯನು! ಅಥವಾ ಗುರುಮಾರ್ಗದಾಚರಣೆಯ ತಿಳಿಯದೆ ಕೊಟ್ಟಲ್ಲಿ, ಇಂತು ಕೊಂಡ ಭಕ್ತನು ಬಹುನಿಜದಿಂದ ಆ ಪ್ರಸಾದವೆ ಪ್ರಾಣವಾಗಿದ್ದುದ ನೋಡಿ, ಮುಂದೆ ಷಟ್ಸ್ಥಲಲಿಂಗಾನುಭಾವ ಸದ್ಭಕ್ತ ಶರಣಗಣಂಗಳು ಕೊಟ್ಟಾತಂಗೆ ಇಂತು ಕೊಡದಂತೆ ಆಜ್ಞೆಯ ಮಾಡಿ, ಕೊಂಡಂಥವರ ದುರ್ಗುಣಗಳ ಬಿಡಿಸಿ, ವೇಧಾಮಂತ್ರಕ್ರಿಯೆ ಹಸ್ತಮಸ್ತಕಸಂಯೋಗ ಮೊದಲಾದ ಇಪ್ಪತ್ತೊಂದು ದೀಕ್ಷೆಯ ಸದ್ಗುರುವಿನಿಂ ಮಾಡಿಸಿ, ಸದಾಚಾರವ ಬೋಧಿಸಿ, ಅಷ್ಟಾವರಣದ ಗೊತ್ತ ಸರ್ವಾಂಗಲಿಂಗದಿ ತೋರಿ, ಅನಾದಿಜಂಗಮಪ್ರಸಿದ್ಧ ಪ್ರಸಾದ ಪಾದೋದಕವ ಕೊಟ್ಟುಕೊಂಬುದೆ ಸದಾಚಾರ ಸನ್ಮಾರ್ಗ ನೋಡ! ಗುಹೇಶ್ವರಲಿಂಗಕ್ಕೆ ಚೆನ್ನಬಸವಣ್ಣ.