ವಚನ - 802     
 
ಅಯ್ಯಾ! 'ವಿಶ್ವತೋಚಕ್ಷುರುತ' ಎಂಬುದಾಗಿ, ಜಗವೆಲ್ಲ ನೇತ್ರಂಗಳಾಗಿರ್ಪನು ಶಿವನು. ಜಗವೆಲ್ಲ ನೇತ್ರವಾಗಿದ್ದರೆ, ನೇತ್ರದೊಳಗುತ್ತಮ ಮಧ್ಯಮ ಕನಿಷ್ಠಂಗಳು ಏಕಾದವು? ಎಂದಡೆ ಹೇಳಿಹೆವು ಕೇಳಿರಯ್ಯ: ನೇತ್ರಕ್ಕೆ ನೇತ್ರವಾದ ಜಗನೇತ್ರಕ್ಕೆ ಪ್ರಕಾಶನಾಗಿ ತನ್ನ ತೋರದೆ ಇದ್ದಂಥಾ, ಶ್ರೀಗುರು ಕರುಣಾಕಟಾಕ್ಷೆಯಿಂದ ಉದಯವಾದ ಇಷ್ಟಮಹಾಜ್ಯೋತಿರ್ಲಿಂಗವನು ನೋಡಿದ ನೇತ್ರವೆ ಲಿಂಗನೇತ್ರವು. ಅದೇ ಸದ್ಧರ್ಮಸ್ವರೂಪವಾದ ಉತ್ತಮವೆನಿಸುವುದು. ಅಯ್ಯಾ, ಖಗಮೃಗ ಫಣಿಕೀಟಕಾದಿಗಳ ನೇತ್ರಂಗಳು ಉಭಯಕರ್ಮಕ್ಕೆ ಒಳಗಿಲ್ಲಾಗಿ ದೃಷ್ಟಿದೋಷವಿಲ್ಲಾಗಿ ಅದು ಮಧ್ಯಮವೆನಿಸುವುದು. ಅಯ್ಯಾ, ಇಷ್ಟಮಹಾಜ್ಯೋತಿರ್ಲಿಂಗಬಾಹ್ಯವಾಗಿ ಪಂಚಮಹಾಪಾತಕ ಸೂತಕಂಗಳಲ್ಲಿ ವರ್ತಿಸುವ ಆಪಾತ್ರಜೀವಿಗಳಾದ ಭವಿಗಳ ನೇತ್ರಂಗಳು ಉಭಯಕ್ಕೆ ಅನುಕೂಲವಾದ ಕಾರಣ ಚರ್ಮಚಕ್ಷುವೆಂದು, ತನ್ನತಾನರಿಯದ ಗಾಡಾಂಧಕಾರವೆಂದು ಮೀನುಗಳೆಂದು ವಿಷನೇತ್ರವೆಂದು ಮನ್ಮಥನ ಕೈಗೆ ಸಿಲುಕಿದ ನೀಲೋತ್ಪಲಬಾಣವೆಂದು, ತಾಮಸಾಗ್ನಿಯೆಂದು ಕುರೂಪದ ನೇತ್ರೇಂದ್ರಿಯವೆಂದು, ಶಿವಾಚಾರ ಸದ್ಧರ್ಮಿಗಳ ನಿಂದಿಸುವ ಮಹಾಪಾತಕ ದೃಷ್ಟಿಯೆಂದು ಹೇಳಲ್ಪಟ್ಟಿತ್ತು. ಇಷ್ಟಲಿಂಗವಿಲ್ಲಾದ ಕಾರಣ ಕನಿಷ್ಠಚಕ್ಷುವೆಂದುದು ನೋಡಾ. ಅಯ್ಯಾ, ಅದರಿಂದ ಸದ್ಭಕ್ತ ಶರಣಗಣಂಗಳು ಅರ್ಚನೆ ಅರ್ಪಿತದ್ರವ್ಯವ ಕೊಡದೆ, ಅವರೊಡನೆ ಸಂಭಾಷಣೆ ದರ್ಶನ ಸ್ಪರ್ಶನವ ಮಾಡಲಿಲ್ಲ ನೋಡಾ ಗುಹೇಶ್ವರಲಿಂಗದಲ್ಲಿ ಸಿದ್ಧರಾಮಯ್ಯ.