ವಚನ - 671     
 
ನಯನೇಂದ್ರಿಯಂಗಳು ಮುಟ್ಟದೆ, ಶ್ರೋತ್ರೇಂದ್ರಿಯಂಗಳು ಮುಟ್ಟದೆ, ಘ್ರಾಣೇಂದ್ರಿಯಂಗಳು ಮುಟ್ಟದೆ, ಜಿಹ್ವೇಂದ್ರಿಯಂಗಳು ಮುಟ್ಟದೆ, ತ್ವಗಿಂದ್ರಿಯಂಗಳು ಮುಟ್ಟದೆ- ಇಂತು ಇಂದ್ರಿಯಂಗಳು ಹಲವ ಹರಿಯದೆ, ಇವು ಈಶನಮುಖವೆಂದರ್ಪಿಸಾ ಸೂಸಲೀಯದೆ, ಸರ್ವಕರಣಂಗಳು ಈಶನ ಕರಣಂಗಳೆಂದರ್ಪಿಸಾ. ಎಲೆ ಅಯ್ಯಾ, ನಿನಗೆ ಗುರುಕರುಣವಾದ ಬಳಿಕ, ಸರ್ವಾಂಗ ಲಿಂಗಾಂಗವೆಂದರ್ಪಿಸಿ ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ನಿತ್ಯವ ಕೂಡಾ ಅಯ್ಯಾ.