ವಚನ - 858     
 
ಮಧ್ಯದ ಮಧ್ಯದಲ್ಲಿ ವೇದಾದಿಮೂಲಿನಿ ಆದಿಯ ಸಂತಕ್ಕೆ ಆದಿಯಾಗಿಪ್ಪಳು. ಐದೇಳನಡರಿದಡೆ ಮೈದೋರದಿಪ್ಪಳು. ಪತಿಗೆ ಪತಿಯಾಗಿಪ್ಪಳು ಸತಿಗೆ ಬುದ್ಧಿಯಾಗಿಪ್ಪಳು. ತನ್ನ ನೋಡಲೆಂದು ಹೋದಡೆ ಚಂದ್ರ ಸೂರ್ಯರ ನುಂಗಿ ಕಣ್ಗಾಣದೆ ಹೋಗಿ ಅತ್ತೆಯ ಕೈವಿಡಿಯಲು, ಈ ಮುವ್ವರಿಗೆ ಹುಟ್ಟಿಗೆ ತಾನೆಯಾದಳು. ತಾಯ ಕೈವಿಡಿದನೆಂದು ನಾನಂಜಿ ಸತಿಯಾದೆನೆನಗೆ ಪತಿಯಾದೆ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿನ್ನ ಕೂಡಿದ ಕೂಟ ನೀನರಿದಡರಿವೆ, ಮರದಡೆ ಮರವೆ.