ವಚನ - 879     
 
ಮಹಾವಿಂಧ್ಯಪರ್ವತದಲ್ಲಿ ಜ್ಯೋತಿರ್ಮಯವೆಂಬ ಪ್ರಜ್ವಲ ಸ್ಫಟಿಕ ಘಟದಲ್ಲಿ ಒಪ್ಪಿ ತೋರುವ ಜ್ಯೋತಿರ್ಮಯ ಲಿಂಗವೇ ನೀನು, ಸೂಕ್ಷ್ಮವೇ ನೀನು. ಉರುತರ ಸಕಲ ಬ್ರಹ್ಮಾಂಡಂಗಳೆಲ್ಲ ನಿನ್ನ ರೋಮಕೂಪದ ಕೊನೆಯ ಮೊನೆಯ ಮೇಲೆ. ಸಕಲ ವ್ಯಾಪಿಯಡಗಿಪ್ಪಂಥ ಬ್ರಹ್ಮಾಂಡಂಗಳನ್ನು ಧರಿಸಿಪ್ಪ ನಿನ್ನ ಅನಂತ ವೇದಂಗಳೆಲ್ಲವು ನಿನ್ನೊಳಗೆ. ನೀನು ಸರ್ವವ್ಯಾಪ್ತಿಗೆ ಒಳಗಾದುದಿಲ್ಲ. ನಿನ್ನ ಮೀರಿದ ಆಧಿಕ್ಯ ಒಂದೂ ಇಲ್ಲ. ಘನತರಲಿಂಗವೆ ಗುರುಕರುಣದಿಂದ ಎನ್ನ ಕರಸ್ಥಲಕ್ಕೆ ಬಂದು ಸೂಕ್ಷ್ಮವಾದೆಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.