ವಚನ - 1268     
 
ಮೂರಳಿದು ಮೂರಳವಟ್ಟುದೆ ಭಕ್ತಸ್ಥಲ. ಮೂರಳಿದು ಮೂರಳವಟ್ಟುದೆ ಜಂಗಮಸ್ಥಲ. ಅಳಿದು ಎಂದಡೆ, ಇದ್ದ ಮನ ಲಿಂಕ್ಕೆ ಕೊಟ್ಟಾಗಳೆ [ಹೆಣ್ಣ] ಳಿದುದು; ಇದ್ದ ಧನ ಜಂಗಮಕ್ಕೆ ಕೊಟ್ಟಾಗಳೆ ಹೊನ್ನಳಿದುದು; ಇದ್ದ ತನು ಗುರುವಿಂಗೆ ಕೊಟ್ಟಾಗಳೆ [ಮಣ್ಣ] ಳಿದುದು. ಅವರವರಾಚರಣೆಯ ನೋಡಿ ಕೊಡುವುದಲ್ಲದೆ, ಬೇಡಿದ ಪರಿಯಲ್ಲಿ ಕೊಡುವುದೇನೋ ಅಯ್ಯಾ ? ಸಿಂಧುಬಲ್ಲಾಳ ತನ್ನ ವಧುವ ಕೊಟ್ಟನೆಂದು ಹೇಳಿದಲ್ಲಿ, ತನ್ನ ಹೆಂಡತಿಯನೇನಾದಡೂ ಕೊಟ್ಟನೆ? ಇಲ್ಲಿಲ್ಲ. ಹೆಣ್ಣು ಎಂದಡೆ ತಾನು, ಶರಣಸತಿ ಲಿಂಗಪತಿ ಎಂಬ ಭಾವದಿಂದ ಲಿಂಗಕ್ಕೆ ಮನ ಕೊಟ್ಟು ವಧುವಾದನಲ್ಲದೆ ತನ್ನಂಗನೆಯ ಕೊಡಲಿಲ್ಲವು. [ಹೊನ್ನು] ಎಂದಡೆ ಜಂಗಮಕ್ಕೆ ಧನವ ಕೊಟ್ಟು ನಿಧಿ ನಿಧಾನ ಒಲ್ಲವಾದನಲ್ಲದೆ, ತನ್ನಂಗನೆಯ ಕೊಡಲಿಲ್ಲವು. [ಮಣ್ಣು] ಎಂದಡೆ ತನ್ನ ತನುವ ಗುರುವಿಂಗೆ ಕೊಟ್ಟು ಸ್ವಯಂಭುವಾದನಲ್ಲದೆ ತನ್ನಂಗನೆಯ ಕೊಡಲಿಲ್ಲವು. ಹೆಣ್ಣು ಸಲ್ಲದು ಜಂಗಮಕ್ಕೆ ; ಹೊನ್ನು ಸಲ್ಲದು ಲಿಂಗಕ್ಕೆ ; ಮಣ್ಣು ಸಲ್ಲದು ಗುರುವಿಂಗೆ. ಇದರ ಭೇದವನಂತವುಂಟು: ತಿಳಿವಡೆ ಬಹು ದುರ್ಲಭ; ತಿಳಿದು ನೋಡಿದಡೆ ಭಕ್ತಿಗೆ ಬಹು ಸುಲಭ. ತಿಳಿದು ಮಾಡಿ ಮೋಕ್ಷವ ಹಡೆದರಲ್ಲದೆ, ತಿಳಿಯದೆ ಮಾಡವರೇನು ಮೇರುವಿನೊಳಗಿರುವ ಭಂಗಾರವನಾಗಲಿ, ಸಮುದ್ರದೊಳಗಿರುವ ನಿಧಿ ನಿಧಾನಂಗಳನಾಗಲಿ ತಂದಿಹರೇನೋ? ಕಪಿಲಸಿದ್ಧಮಲ್ಲಿಕಾರ್ಜುನಾ, ಇದರಿರವ ಹೇಳಿಕೊಡಯ್ಯಾ, ಎನ್ನ ಪ್ರಾಣಗುರು ಚೆನ್ನಬಸವಣ್ಣನಿಂದ.