ವಚನ - 1358     
 
ವಿವೇಕವೆಂಬುದು ಬೇರಿಲ್ಲ ಕಂಡಯ್ಯಾ, ನವನಾಳದ ಸುಳುಹ ತೊಡೆದು ಸುನಾಳವ ಶುದ್ಧವ ಮಾಡುವೆ. ಅಷ್ಟದಳ ಕಮಲವನು ಊರ್ಧ್ವಮುಖವಾಗಿ ನಿಜಪದದಲ್ಲಿ ನಿಲ್ಲಿಸುವೆ. ಐವತ್ತೆರಡಕ್ಷರವ ತಿಳಿದು ನೋಡಿ ಏಕಾಕ್ಷರದಲ್ಲಿ ನಿಲ್ಲಿಸುವೆ. ಕಪಿಲಸಿದ್ಧಮಲ್ಲಿಕಾರ್ಜುನಾ, ಎನ್ನ ವಿಚಾರದ ಹವಣ ನೀನೆ ಬಲ್ಲೆ.