ವಚನ - 1315     
 
ನೆಲೆಯಿಲ್ಲದ ಮಹಾಜಲದೊಳಗೆ ಮಲಗಿರ್ದ ಸರ್ಪನ ಫಣಿಯ ನೋಡಲು, ಬೆಳಬೆಳಗುತ್ತಿರ್ದವು ರಜತ ಹೇಮವೆಂಬ ಎರಡು ಕುಲಗಿರಿಗಳು. ಎಡದ ಕೈಯಲ್ಲಿ ರಜತಗಿರಿಯಂ ಪಿಡಿದು ಬಲದ ಕೈಯಲ್ಲಿ ಹೇಮಾದ್ರಿಯಂ ಪಿಡಿದು ಮಹಾದಂಡಿಯ ಫಣಿಯ ಒದೆಯಲು ನೆಗಹಿತ್ತು ಈರೇಳು ಭುವನವ. ಅಲ್ಲಿಂದ ಮೇಲೆ, ಗಿರಿ ಎರಡು ವರ್ಣವಳಿದು ಅಡಗಿದವು ಚಿಕ್ಕಾಡಿನ ಹೃದಯದಲ್ಲಿ! ಚಿಕ್ಕಾಡು ಕಂದೆರೆದು ಕಂಡಿತ್ತು ಚಿದಾಕಾಶವೆಂಬ ಶಿವಾಲಯವ! ಅಂಗವಿಲ್ಲದ ಶೃಂಗಾರಕ್ಕೆ ಭಂಗ ಉಂಟೆ? ಇಲ್ಲವಾಗಿ, ಗುಹೇಶ್ವರನೆಂಬ ಶಬ್ದಬ್ರಹ್ಮಕ್ಕೆ ಮುದ್ರಿಕೆಯಾಯಿತ್ತು.