ವಚನ - 1576     
 
ಸ್ವಸ್ಥ ಪದ್ಮಾಸನದಲ್ಲಿ ಕುಳ್ಳಿರ್ದು ನಿಟ್ಟೆಲುವ ಮುರಿದು ನಿಷ್ಠೆಯಿಂದ ಹಿಂದಣ ಬಟ್ಟೆಯ ತೆಗೆದು, ಅಮೃತವ ಉಂಡಿಹೆನೆಂಬವರು ಕೆಟ್ಟ ಕೇಡಿಂಗೆ ಕಡೆಯಿಲ್ಲ. `ಅತ್ಯತಿಷ್ಟದ್ದಶಾಂಗುಲ' ಎಂಬ ಶ್ರುತಿಯ ನೋಡಲು ಮುಟ್ಟಿ ನೆಲೆಗೊಳಿಸುವ ಠಾವುಂಟೆ? ಸ್ಥಾನಮಾನವೆಂಬ ಮಾತಿಂಗೆ ದೂರವಾದ ಘನವ ಬ್ರಹ್ಮರಂಧ್ರದಲ್ಲಿ ಕಂಡಿಹೆನೆಂದಡೆ ಕಾಣಬಹುದೆ? ನಮ್ಮ ಗುಹೇಶ್ವರಲಿಂಗವು ಕಲ್ಪಿತಕ್ಕೆ ದೂರ ಕೇಳಾ ಸಿದ್ಧರಾಮಯ್ಯಾ.