ವಚನ - 987     
 
ವೇದ ಹದಿನಾರುಸಾವಿರಂಗಳು ನಿನ್ನನರಸಿಯೊದರಿ ಕಾಣದೆ ಹೋದವು. ನಿನ್ನಾಧಿಕ್ಯವ ಬಲ್ಲವರಾರಯ್ಯ ನಿನ್ನವರಲ್ಲದೆ? ಉರುತರ ಪರಮಜ್ಞಾನಿ ಘನತರದ ಸಂಯೋಗಿ ನಿನ್ನ ಪ್ರಮಾಣವನರಿಯಲ್ಕೆ ಆರ ವಶವು ಹೇಳಾ. ಸೀಮೆಯ ಮೀರಿದ ಸಂಬಂಧಿ, ಲೆಕ್ಕವ ಮೀರಿದ ಅಪ್ರಮಾಣ, ಗುರುವಿನ ಕರುಣದಿಂದ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದೆ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ.