ವಚನ - 349     
 
ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ ಇಂಗಿತವನೇನೆಂದು ಬೆಸಗೊಂಬಿರಯ್ಯಾ? ಅವರ ನಡೆಯೇ ಆಗಮ, ಅವರ ನುಡಿಯೇ ವೇದ; ಅವರ ಲೋಕದಮಾನವರೆಂದೆನ್ನಬಹುದೆ ಅಯ್ಯಾ?* ಅದೆಂತೆಂದಡೆ, ಸಾಕ್ಷಿ: 'ವೃಕ್ಷದ್ಭವತಿ ಬೀಜಾನಿ ಹಿ ತದ್‍ವೃಕ್ಷೇ ಲೀಯತೇ ಪುನಃ | ರುದ್ರಲೋಕಂ ಪರಿತ್ಯಕ್ತ್ವಾ ಶಿವಲೋಕೇ ಭವಿಷ್ಯತಿ||' ಎಂದುದಾಗಿ, ಅಂಕೋಲೆಯ ಬೀಜದಿಂದಾಯಿತ್ತು ವೃಕ್ಷವು; ಆ ವೃಕ್ಷ ಮರಳಿ ಆ ಬೀಜದೊಳಡಗಿತ್ತು. ಆ ಪ್ರಕಾರದಲ್ಲಿ ಲಿಂಗದೊಳಗಿಂದ ಪುರಾತನರುದ್ಭವಿಸಿ, ಮರಳಿ ಆ ಪುರಾತನರು ಆ ಲಿಂಗದೊಳಗೆ ಬೆರಸಿದರು ನೋಡಿರಯ್ಯಾ. ಇಂತಪ್ಪ ಪುರಾತನರಿಗೆ ನಾನು ಶರಣೆಂದು ಹುಟ್ಟುಗೆಟ್ಟೆನಯ್ಯಾ ಚೆನ್ನಮಲ್ಲಿಕಾರ್ಜುನಾ.