ವಚನ - 129     
 
ಒಳಗ ಶೋಧಿಸಿ ಹೊರಗ ಶುದ್ಧಯಿಸಿ ಒಳಹೊರಗೆಂಬ ಉಭಯ ಶಂಕೆಯ ಕಳೆದು, ಸ್ಫಟಿಕದ ಶಲಾಕೆಯಂತೆ ತಳವೆಳಗು ಮಾಡಿ ಸುಕ್ಷೇತ್ರವನರಿದು ಬೀಜವ ಬಿತ್ತುವಂತೆ ಶಿಷ್ಯನ ಸರ್ವ ಪ್ರಪಂಚ ನಿವೃತ್ತಿಯಂ ಮಾಡಿ ನಿಜೋಪದೇಶವನಿತ್ತು, ಆ ಶಿಷ್ಯನ ನಿಜದಾದಿಯನೈದಿಸುವನೀಗ ಜ್ಞಾನಗುರು. ಆ ಸಹಜ ಗುರುವೀಗ ಜಗದಾರಾಧ್ಯನು, ಅವನ ಶ್ರೀಪದಕ್ಕೆ ನಮೋ ನಮೋ ಎಂಬೆ ಕಾಣಾ ಚೆನ್ನಮಲ್ಲಿಕಾರ್ಜುನಾ.